ಅಮಲಕಪುರ/ನೆಲ್ಲಿಕಾರು

ಮಂಗಳೂರು ತಾಲೂಕಿನ ನೆಲ್ಲಿಕಾರು ಒಂದು ಸಾಧಾರಣಹಳ್ಳಿ ಆದರೂ ಅದರ ಹೆಸರು ಜಿಲ್ಲೆಯ ಒಳಗೂ ಹೊರಗೂ ಹರಡಿದೆ.ಇದಕ್ಕೆ ಮುಖ್ಯ ಕಾರಣ ಇಲ್ಲಿಯೇ ಸಮೀಪದ ಗುಡ್ಡೆಗಳಲ್ಲಿ ದೊರೆಯುವ ಒಂದು ವಿಶಿಷ್ಠ ರೀತಿಯ ಕಪ್ಪುಶಿಲೆ ಇದು ನೆಲ್ಲಿಕಾರು ಶಿಲೆಯೆಂದೆ ಪ್ರಸಿದ್ಧಿ.

ಮಲೆನಾಡ ಸೆರಗಲ್ಲಿದ್ದು ಯಾವ ಗೌಜು ಗದ್ದಲಗಳಿಗೆ ಹೋಗದೆ ಪ್ರಶಾಂತವಾಗಿರುವ ಊರು, ಆದ್ದರಿಂದಲೇ ಇದು ಮುನಿಗಳಿಗೆ ವಾಸಸ್ಥಾನವಾಯಿತು.  ಕಲ್ಯಾಣಕೀರ್ತಿ ಎಂಬ ಯತಿವರ್ಯರು ಇಲ್ಲಿ ಕೈಂಕರ್ಯ ನಡೆಸಿದ್ದರು.ಎಲೆಮರೆಯ ಕಾಯಿಯಂತೆ ಇದ್ದು ಕಾವ್ಯಗಂಗೆಯನ್ನು ಹರಿಸಿದ ಕವಿ ಕಲ್ಯಾಣಕೀರ್ತಿ ನೆಲ್ಲಿಕಾರಿನವರು. ನೆಲ್ಲಿಕಾರಿನ ಬಸದಿ ಇವರ ಕೊಡುಗೆ. ಕಲ್ಪನಾ ಲೋಕದ ವಿಶೇಷವೆಂದು ಭಾಸವಾಗುವ ಈ ಸಂಗತಿ ಐತಿಹಾಸಿಕ ಸತ್ಯ.ಇದಕ್ಕೆ ಶಾಸನಾಧಾರಗಳು ಇವೆ. ತಾಲೂಕಿಗೆ ಮಾತ್ರ ಅಲ್ಲ ಜಿಲ್ಲೆಗೆ ಪ್ರಪ್ರಥಮ ಕನ್ನಡ ಕವಿ ಕಲ್ಯಾಣಕೀರ್ತಿ.ಈತನ ಮೊದಲ ಕಾವ್ಯ ಜಿನಯಜ್ಞಫಲೋದಯ. ಈ ಕಾವ್ಯ ಕ್ರಿ.ಶ 1428ರಲ್ಲಿ ಪೂರ್ಣವಾಗಿತ್ತು ಹಾಗೆಂದು ಕವಿಯೇ ತನ್ನಕಾವ್ಯದ ಕೊನೆಯಲ್ಲಿ ತಿಳಿಸಿದ್ದಾರೆ.

 

 

ನೆಲ್ಲಿಕಾರಿನ ಹಿಂದಿನ ಹೆಸರು ಅಮಲಕಪುರ ಊರ ಮಧ್ಯ ವಿಶಾಲ ಪ್ರಾಂಗಣದಲ್ಲಿ ಭ.ಅನಂತನಾಥ ಸ್ವಾಮಿಯ ದಿವ್ಯ ಬಸದಿಯಿದೆ.ಇದು ಕ್ರಿ.ಶ 1425ರ ವೇಳೆಗೆ ಸ್ಥಾಪಿತವಾದ ಬಸದಿಯೆಂದು ಇತಿಹಾಸಕಾರರು ಹೇಳುತ್ತಾರೆ.ಮುಖ್ಯವಾಗಿ ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ಶಿಲಾ ಬಸದಿಯು ಎರಡು ಅಂತಸ್ತಿನ ಸುಂದರವಾದ ಕಟ್ಟಡ . ಗರ್ಭಗೃಹದಲ್ಲಿ ವಿರಾಜಮಾನರಾದ ಭ.ಅನಂತನಾಥ ಸ್ವಾಮಿಯ ಮೂಲವಿಗ್ರಹವು ಹೊಯ್ಸಳ ಶೈಲಿಯ ಗಂಭೀರ ರಚನೆ .ಮೇಗಿನ ನೆಲೆಯಲ್ಲಿ ಅತಿಸುಂದರ ಭ.ಚಂದ್ರನಾಥರ ವಿಗ್ರಹವೂ ಇದೆ.

 

 

ನೆಲ್ಲಿಕಾರು ರಥೋತ್ಸವವು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದೆ .ಹಾಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ನಾಡಿನ ಜೈನ ಜೈನೇತರರೂ ಇದರಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ .ಪ್ರತೀ ಸಂವತ್ಸರದ ಆದಿಯ ಪಾಡ್ಯದ ದಿನ ಧ್ವಜಾರೋಹಣವಾಗಿ ಷಷ್ಠಿಯ ತನಕ ವಿದ್ಯುಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತವೆ ರಥೋತ್ಸವದ ಮೊದಲ ದಿನ ಅಂದರೆ ಪಂಚಮಿಯಂದು ಭ. ಚಂದ್ರಪ್ರಭ ಸ್ವಾಮಿಗೆ ಅಟ್ಟಳಿಗೆಯ ಮೇಲೆ ಅಭಿಷೇಕ ಹಾಗೂ ನಿರ್ದಿಷ್ಟವಾದಕೆಲವು ಕಟ್ಟೆಗಳಲ್ಲಿಕಟ್ಟೆಪೂಜೆ ಉತ್ಸವವು ನಡೆಯುತ್ತದೆ.

 

 

ಬಸದಿಯ ಒಳಾಂಗಣದಲ್ಲಿ ಕ್ಷೇತ್ರಪಾಲರ ಸ್ಥಂಭವಿದೆ .ಹೊರಗಿನ ವಿಶಾಲ ಪ್ರಾಂಗಣದ ನಾಲ್ಕೂ ಕಡೆಯೂ ಬಸದಿಗೆ ರಕ್ಷಣೆಯ ಕೋಟೆಯಂತೆ ಶ್ರಾವಕರ ಮನೆಗಳಿವೆ.

ಶಾಸ್ತ್ರಸಾರ ಸಮುಚ್ಚಯ ಕನ್ನಡಟೀಕು ಬರೆದ ಮುನಿ ಮಾಘನಂದ್ಯಾಚಾರ್ಯರು ಇಲ್ಲಿಯ ಚೈತ್ಯವಾಸಿಗಳು.ಈ ಗ್ರಂಥದಲ್ಲಿ ತಮ್ಮ ಪೂರ್ವವಿಚಾರವನ್ನು ತಿಳಿಸಿರುವುದಿಲ್ಲ ಆದರೆ ಗ್ರಂಥವನ್ನು ನೆಲ್ಲಿಕಾರಿನ ಬಸದಿಯಲ್ಲಿ ಬರೆದದ್ದು ಅಂತ ತಿಳಿಸುತ್ತಾರೆ.ಹೊಂಬುಜ ಕ್ಷೇತ್ರದ ಹಿಂ‌ದಿನ ಗುರುಗಳಾದ ದೇವೇಂದ್ರ ಕೀರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಶ್ರವಣಬೆಳ್ಗೊಳದ ಗುರು ಶ್ರೀ ಚಾರುಕೀರ್ತಿ ಸ್ವಾಮಿಗಳವರು ನೆಲ್ಲಿಕಾರಿನವರು‌.

 

 

ನೆಲ್ಲಿಕಾರಿನ ಗಣ್ಯರಲ್ಲಿ ದಿವಂಗತ ಎನ್. ಎಸ್ ಜೈನಿ ಒಬ್ಬರು ಶಾಲೆಯ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದ ಇವರು ಹಿಂದಿ ಮರಾಠಿ ಸಂಸ್ಕೃತಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದವರು,ದಿ.ರಾಧಮ್ಮನವರು ದಿ. ಎನ್ ಎಸ್ ಜೈನಿಯವರ ಧರ್ಮಪತ್ನಿ .ಜೈನಮಹಿಳೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ರಾಧಮ್ಮನವರು ಹಲವಾರು ಭಜನೆ ಕೀರ್ತನೆಗಳನ್ನು ಬರೆದವರು,
ವರ್ಧಮಾನ ಚರಿತ್ರೆಯನ್ನು ಸಾಂಗತ್ಯ ದಲ್ಲಿ ಬರೆದಿದ್ದಾರೆ.

ಚಂದಯ್ಯ ಶಾಸ್ತ್ರಿಯವರು ನೆಲ್ಲಿಕಾರಿನ ಬಸ್ತಿಯಲ್ಲಿ ಪ್ರತಿನಿತ್ಯ ಶಾಸ್ತ್ರ ಪಠಣವನ್ನುಮಾಡಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದವರು ಭಜನೆ ಕೀರ್ತನೆ ಗಳನ್ನು ರಚಿಸಿದವರು..ಇನ್ನು ಯಾದವರು ಪ್ರಖಾಂಡ ಪಂಡಿತರಾಗಿದ್ದರು ನನ್ನ ಬಾಲ್ಯದ(ಅಜಿತ್ ನಾರಾವಿ) ಗುರುಗಳು ಆಗಿದ್ದವರು ಧವಳ ಗ್ರಂಥದ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡವರು,ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಮಾತ್ರವಲ್ಲ ಮಕ್ಕಳಿಗೆ ಸಂಗೀತ ಪಾಠವನ್ನು ಕೂಡ ಹೇಳಿಕೊಟ್ಟು ಮಕ್ಕಳಲ್ಲಿ ಜಿನಭಕ್ತಿ ಉಂಟು ಮಾಡಿದವರು.

ಹೀಗೆ ಒಟ್ಟಿನಲ್ಲಿ ನೆಲ್ಲಿಕಾರು ಒಂದು ಸುಸಂಸ್ಕ್ರತ ಸ್ಥಳವಾಗಿದ್ದು ಧರ್ಮ ಮತ್ತು ಜ್ಞಾನ ಪ್ರಸಾರ ಕಾರ್ಯ ಇಲ್ಲಿ ಅವಿಚ್ಛಿನ್ನವಾಗಿ ನಡೆದಿತ್ತು.ಈಗಲು ನಡೆಯುತ್ತಾ ಇದೆ.ನೆಲ್ಲಿಕಾರು ಶಿಲೆಗಷ್ಟೆ ಅಲ್ಲದೆ ಜೈನ ಸಂಸ್ಕೃತಿ ಹಾಗೂ ಸಾಹಿತ್ಯ ಬೆಳವಣಿಗೆಗೂ ಸುಂದರ ಪ್ರಶಾಂತ ತಾಣವಾಗಿ ಬೆಳೆದು ನಿಂತಿದೆ.🙏🏻

(ಎಸ್.ಡಿ ಶೆಟ್ಟಿ ಮತ್ತು ಡಾ|ಪಿ.ಎನ್ ನರಸಿಂಹಮೂರ್ತಿ ಇವರು ಬರೆದ ಲೇಖನಗಳಿಂದ ಸಂಗ್ರಹಿಸಿ ಬರೆಯಲಾಗಿದೆ)
©✍ಅಜಿತ್ ಜೈನ್ ನಾರಾವಿ
Pic: Sheethal Jain nisarga, Parshwanath Nerenki

Translate »
error: Content is protected !!